ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಎಲ್ಆರ್ಟಿ ಯೋಜನೆ ಜಾರಿಗೆ ತರಲು ಚಿಂತನೆ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್

ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಅವಳಿ ನಗರದ ನಡುವೆ ಸಂಚರಿಸುವ ಬಿಆರ್ಟಿಎಸ್ ಬಸ್ ಬದಲು ಲಘು ರೈಲು (ಎಲ್ಆರ್ಟಿ) ಯೋಜನೆ ಜಾರಿಗೆ ತರಲು ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಪಿಪಿಪಿ ಮಾಡಲ್ನಲ್ಲಿ ಬರಬೇಕು. ಸಾರ್ವಜನಿಕ ಸಹಭಾಗಿತ್ವದಲ್ಲಿ ಬರುವುದರಿಂದ ಅವರೇ ಬಂಡವಾಳ ಹೂಡಿಕೆ ಮಾಡಬೇಕು. ಕಾರಿಡಾರ್ ನಿರ್ಮಾಣ ಹಾಗೂ ಬಸ್ ನಿರ್ವಹಣೆ ಮಾಡಬೇಕು ಎಂಬ ಯೋಜನೆ ಇಟ್ಟುಕೊಂಡಿದ್ದೇವೆ ಎಂದರು.
ಎಲ್ಆರ್ಟಿ ಪ್ರಾರಂಭವಾದರೆ ಏಕಕಾಲಕ್ಕೆ 200-250 ಜನ ಪ್ರಯಾಣ ಮಾಡಬಹುದು. ಎಲೆಕ್ಟ್ರಿಕ್ ಇರುವುದರಿಂದ ವಾಯು ಮಾಲಿನ್ಯ ಕೂಡ ತಡೆಗಟ್ಟಬಹುದು ಎಂದು ಅವರು ಹೇಳಿದರು.
ಜನವರಿಯಲ್ಲಿಯೇ ಬಿಆರ್ಟಿಎಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಈ ಸಾರಿಗೆಯಲ್ಲಿ ಏನೆಲ್ಲಾ ಬದಲಾವಣೆ ಮಾಡಬೇಕು ಎಂಬುದರ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಿದ್ದೇವೆ. ಕಳೆದ ತಿಂಗಳು ನಾನೇ ವೈಯಕ್ತಿಕವಾಗಿ ಫ್ರಾನ್ಸ್ಗೆ ಹೋಗಿದ್ದೆ. ನಾನು ಅಲ್ಲಿನ ಕಂಪನಿ ಜೊತೆ ಮಾತಾಡಿದ್ದೇನೆ. ಇದೊಂದು ಪಿಪಿಪಿ ಪ್ರಾಜೆಕ್ಟ್ ಆಗಿದ್ದು, ಇದರ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಿ, ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಅವರು ಹೇಳಿದರು.



