
ರಾಮನಗರ : ಇಲ್ಲಿನ ಬಿಡದಿಯ ಹಕ್ಕಿಪಿಕ್ಕಿಕಾಲೊನಿಯಲ್ಲಿ ಮೇ 12 ರೈಲ್ವೆ ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದ 15 ವರ್ಷದ ಬಾಲಕಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲಾಗಿದ್ದು, ಇದು ಕೊಲೆಯಲ್ಲ ಬದಲಿಗೆ ರೈಲು ಅಪಘಾತ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾತು ಬಾರದ ಅಪ್ರಾಪ್ತ ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ಬಳಿಕ ಹತ್ಯೆಗೈದು ರೈಲ್ವೆ ಹಳಿಯ ಬಳಿ ಶವ ಬಿಸಾಡಿ ಎಸ್ಕೇಪ್ ಆಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿತ್ತು. ಆದ್ರೆ ಆ ಎಲ್ಲಾ ಗುಮಾನಿಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಹೌದು, ಬಾಲಕಿ ಶವದ ಮರಣೋತ್ತರ ಪರೀಕ್ಷೆ ವರದಿ ಇದನ್ನು ದೃಢಪಡಿಸಿದ್ದು ಬಾಲಕಿಗೆ ರೈಲು ಡಿಕ್ಕಿ ಹೊಡೆದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಸಾಬೀತುಪಡಿಸುವ ಸಿಸಿಟಿವಿ ಫೂಟೇಜ್ ಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಪೊಲೀಸರು ಸಹ ಈ ವಿಡಿಯೊ ನಿಜವೆಂದು ಹೇಳಿದ್ದಾರೆ.
ಈ ಬಾಲಕಿ ಸಂಜೆ ರೈಲು ಹಳಿ ಬಳಿ ತೆರಳಿದ್ದಾಗ 6.07 ಕ್ಕೆ ಬಂದ ರೈಲು ಆಕೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದು ಆಕೆ ಸಾವಿಗೀಡಾಗಿದ್ದಾಳೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.


