ಹುಕ್ಕೇರಿ ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯರೋಧನ..! ನಾಮಫಲಕ ಅಳವಡಿಕೆಗೆ ಅಧಿಕಾರಿಗಳಿಗಿಲ್ಲ ಆಸಕ್ತಿ: ಕಚೇರಿ ಪತ್ತೆಗೆ ರೈತರ ಪರದಾಟ

ಹುಕ್ಕೇರಿ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅಲ್ಲಲ್ಲಿ ಸಸಿ ನೆಡುತ್ತಿರುವ ಹುಕ್ಕೇರಿ ಸಾಮಾಜಿಕ ಅರಣ್ಯ ವಲಯ ಇಲಾಖೆ ತನ್ನ ಕಚೇರಿಗೇ ನಾಮಫಲಕ ಅಳವಡಿಸುವುದನ್ನು ಮರೆತಂತಿದೆ. ಈ ಕಚೇರಿ ಪತ್ತೆ ಹಚ್ಚುವಲ್ಲಿ ರೈತರ ಪರದಾಡುವಂತಾಗಿದ್ದು ನಾಮಫಲಕ ಅಳವಡಿಸದಷ್ಟು ಇಲಾಖೆಗೆ ದಾರಿದ್ರ್ಯತನ ಬಂದಿದೆ ಎಂಬ ಕುಹಕ ಮಾತುಗಳು ಕೇಳಿ ಬಂದಿವೆ.
ಇಲ್ಲಿನ ಕೋರ್ಟ್ ಸರ್ಕಲ್ ಸನೀಹದಲ್ಲಿಯೇ ಸಂಕೇಶ್ವರ ರಸ್ತೆಗೆ ಹೊಂದಿಕೊಂಡಿರುವ ಸಾಮಾಜಿಕ ಅರಣ್ಯ ವಲಯ ಇಲಾಖೆಗೆ ಬೋರ್ಡ್ ಹಾಕದಷ್ಟು ದರಿದ್ರ ಅಂಟಿಕೊಂಡಿದೆಯೇ ಎಂಬ ಜಿಜ್ಞಾಸೆ ಇದೀಗ ಮೂಡಿದೆ. ಇದರೊಂದಿಗೆ ಹಲವು ದಶಕಗಳಿಂದ ಇರುವ ಈ ಕಚೇರಿಗೆ ಬೋರ್ಡ್ ಹಾಕದಷ್ಟು ಸಾಮಾಜಿಕ ಅರಣ್ಯ ಇಲಾಖೆ ಬೇಸರಿಸಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ನಾಮಫಲಕ ಅಳವಡಿಕೆಗೆ ಅಧಿಕಾರಿಗಳಿಗಿಲ್ಲ ಆಸಕ್ತಿ:ತಾಲೂಕಿನ ವಿವಿಧ ಹಳ್ಳಿಯಿಂದ ಕೆಲಸಕ್ಕೆ ಬರುವ ಮುಗ್ದ ರೈತರು ಅಲೆದು ಕೊನೆಗೆ ಎಲ್ಲೂ ಸಿಗಲಿಲ್ಲ ಎಂದು ಹೈರಾಣಾಗಿ ಮನೆಗೆ ಹೋದವರು ಇದ್ದಾರೆ. ಇನ್ನೂ ಕೆಲವರು ಸಾಮಾಜಿಕ ಅರಣ್ಯ ವಲಯ ಕಚೇರಿ ಪತ್ತೆಗೆ ಸುಸ್ತಾಗಿದ್ದವರೂ ಇದ್ದಾರೆ. ಹುಕ್ಕೇರಿ-ಸಂಕೇಶ್ವರ ರಸ್ತೆಗೆ ಹೊಂದಿಕೊಂಡಿದ್ದರೂ ಸಹ ನಾಮಫಲಕ ಇಲ್ಲದೇ ಇರುವುದರಿಂದ ಜನರಿಗೆ ಹುಡುಕುವುದು ಕಷ್ಟದ ಕೆಲಸವಾಗಿದೆ. ಕೆಲವರು ಇದೇ ಪ್ರದೇಶದಲ್ಲಿರುವ ಲೋಕೋಪಯೋಗಿ ಕಚೇರಿ ಬಳಿ ನಿಂತಿರುವ ಅವರಿವರನ್ನು ಕೇಳಿ ತಿಳಿದುಕೊಂಡು ನಂತರ ಸಾಮಾಜಿಕ ಅರಣ್ಯ ವಲಯ ಕಚೇರಿ ಒಳಗೆ ಹೋಗುತ್ತಾರೆ. ನಾಮಫಲಕ ಅಳವಡಿಸಲು ಅಧಿಕಾರಿಗಳಿಗೆ ಆಸಕ್ತಿ ಇದ್ದಂತಿಲ್ಲ. ಈ ಹಿಂದೆ ಭೇಟಿ ನೀಡಿದ ಇಲಾಖೆಯ ಹಿರಿಯ ಅಧಿಕಾರಿಗಳು ಜನರ ಅನುಕೂಲಕ್ಕಾಗಿ ಬೋರ್ಡ್ ಹಾಕುವಂತೆ ಇಲ್ಲಿನ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಈ ಸಂದರ್ಭಕ್ಕೆ ಗೋಳಾಡಿದ್ದ ಅಧಿಕಾರಿಗಳು ನಂತರ ಇಂದಿಗೂ ನಾಮಫಲಕ ಹಾಕಲೇ ಇಲ್ಲ ಎನ್ನುವುದು ಗಮನಿಸುವ ಸಂಗತಿಯಾಗಿದೆ.
ಇನ್ನು ಈ ಇಲಾಖೆಯ ಅಧಿಕಾರಿಯನ್ನು ತಾಲೂಕಿನ ಕೆಲ ಗ್ರಾಪಂಗಳ ನೊಡೆಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಈ ಪಂಚಾಯತಿಗೆ ಸಂಬಂಧಿಸಿ ಕೆಲಸಗಳಿಗೆ ಬರುವ ಜನಪ್ರತಿನಿಧಿಗಳೂ ಸಹ ಕೊಠಡಿ ಹುಡುಕುವಷ್ಟರಲ್ಲಿ ಹೈರಾಣಾಗಿದ್ದಾರೆ. ಇವರಿಗೆ ಕಚೇರಿ ಹುಡುಕುವುದು ಮತ್ತಷ್ಟು ದುಸ್ತರವಾಗಿದೆ.
ಮಣ್ಣು ಪಾಲಾದ ಮಹತ್ವಾಕಾಂಕ್ಷೆ ಯೋಜನೆ: ಸಾವಿರಾರು ರೂಪಾಯಿ ಖರ್ಚು ಮಾಡಿ ಬೋರ್ಡ್ ಬರೆಸಿ ಹಾಕುವುದು ಬೇಡ. ಕನಿಷ್ಠ ಪಕ್ಷ ಗೋಡೆಗಾದರೂ ಮಸಿಯಿಂದ ಸಾಮಾಜಿಕ ಅರಣ್ಯ ಇಲಾಖೆ ಎಂದು ಬರೆಸಲೂ ಇವರಿಗೆ ಬಡತನ ಬಂದಿದೆಯೇ ಎಂಬುದು ಜನರ ಪ್ರಶ್ನೆಯಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯವೇ ಅರಣ್ಯ ಬೆಳವಣಿಗೆ ಉತ್ತೇಜಿಸುವುದು. ರೈತರಿಗೆ ಸಸಿಗಳನ್ನು ವಿತರಣೆ ಮಾಡುವುದು. ರಸ್ತೆಗಳ ಪಕ್ಕದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ನಿರ್ವಹಣೆ ಮಾಡುವುದು. ಆದರೆ ಹಸಿರು ವಲಯ ಹೆಚ್ಚಿಸಬೇಕೆಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಇಲ್ಲಿ ಸಂಪೂರ್ಣ ಮಣ್ಣು ಪಾಲಾಗಿದೆ ಎನ್ನುವುದು ಸಾರ್ವತ್ರಿಕ ಅಭಿಪ್ರಾಯಗಳಿವೆ.
ಅರಣ್ಯ ಅಧಿಕಾರಿಗಳ ವಿರುದ್ಧ ಜನಾಕ್ರೋಶ: ಗಿಡ ಬೆಳೆಸಿ, ಪರಿಸರ ಉಳಿಸಿ ಎಂಬ ಘೋಷಣೆಯು ಘೋಷಣೆಯಾಗಿಯೇ ಉಳಿದಿದೆ. ಲಕ್ಷಾಂತರ ರೂ ವೆಚ್ಚ ಮಾಡಿ ಸಸಿಗಳನ್ನು ನೆಡಲಾಗಿದೆ ಎಂಬ ಸಾಮಾಜಿಕ ಅರಣ್ಯ ಇಲಾಖೆಯ ಅಂಕಿ- ಅಂಶ ರೈತರಿಗೆ ಅಚ್ಚರಿ ಮೂಡಿಸಿದೆ. ನೆಟ್ಟ ಸಸಿಗಳಲ್ಲಿ ನಾಶವಾಗಿರುವುದೇ ಹೆಚ್ಚು ಎಂಬ ಆರೋಪಗಳು ಕೇಳಿ ಬಂದಿವೆ. ಸಸಿಗಳಿಗೆ ನೀರು ಹಾಕದ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನು ಗ್ರಾಮೀಣ ಜನರಿಗೆ ವರದಾನ ಎನಿಸಿರುವ ಬಹುನಿರೀಕ್ಷಿತ ನರೇಗಾ ಯೋಜನೆಯನ್ನು ಈ ಸಾಮಾಜಿಕ ಅರಣ್ಯ ವಲಯದಲ್ಲಿ ಬಳಕೆ ಮಾಡುತ್ತಿಲ್ಲ ಎಂಬ ಗಂಭೀರ ದೂರುಗಳಿವೆ. ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನರೇಗಾ ಯೋಜನೆ ಅನುಷ್ಠಾನಗೊಳಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.
ಈ ಇಲಾಖೆಯ ಕಚೇರಿಗೆ ಹೊಸದಾಗಿ ಬಂದಿದ್ದು ನಾಮಫಲಕ ಹಾಕದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಕಚೇರಿ ಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
– ಭಾರತಿ ನಂದಿಹಳ್ಳಿ , ಸಾಮಾಜಿಕ ಆರ್ಎಫ್ಒ



