ಬಳ್ಳಾರಿ ಮಹಾನಗರ ಪಾಲಿಕೆಯ ಅಕ್ರಮ ಕೋಟ್ಯಂತರ ಹಣ 2023-24ನೇ ಸಾಲಿನ ಲೆಕ್ಕಪರಿಶೋಧನಾ ಕರಡು ವರದಿಯಲ್ಲಿ ಈ ಕುರಿತ ವಿವರಣೆಗಳಿವೆ.

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯು 2023-24ನೇ ಸಾಲಿನಲ್ಲಿ ಟೆಂಡರ್ ಕರೆಯದೇ ಹಿಂದಿನ ಏಜೆನ್ಸಿಗಳಿಂದಲೇ ಸ್ಮಶಾನ ಕಾವಲುಗಾರರು, ಡೇಟಾ ಎಂಟ್ರಿ ಆಪರೇಟರ್ಗಳು, ಯುಜಿಡಿ ಕಾರ್ಮಿಕರು, ನೀರು ಸರಬರಾಜು ನೌಕರರನ್ನು ನೇಮಕ ಮಾಡಿರುವುದು, ಅದಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡಿರುವುದು ಲೆಕ್ಕಪರಿಶೋಧನೆಯಲ್ಲಿ ಬಯಲಾಗಿದೆ.
ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ಪೂರೈಕೆ ಮಾಡಿರುವ ಕಂಪನಿಯೂ ಅಕ್ರಮ ಮಾಡಿದ್ದು, ಸಂಬಳ, ಭವಿಷ್ಯ ನಿಧಿ ಇತರೆ ಸವಲುತ್ತುಗಳನ್ನು ಕಾರ್ಮಿಕರ ಖಾತೆಗೆ ಪಾವತಿ ಮಾಡದೇ ಇರುವುದೂ ಬಹಿರಂಗವಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆಯ 2023-24ನೇ ಸಾಲಿನ ಲೆಕ್ಕಪರಿಶೋಧನಾ ಕರಡು ವರದಿಯಲ್ಲಿ ಈ ಕುರಿತ ವಿವರಣೆಗಳಿವೆ.
ಪಾಲಿಕೆಯು ‘ಸಬೀರ್ ಸೆಕ್ಯುರಿಟಿ ಸರ್ವೀಸ್, ಬಳ್ಳಾರಿ’ ಎಂಬ ಸಂಸ್ಥೆಯಿಂದ 2021-22 ಅವಧಿಯಲ್ಲಿ 7ಜನ ಸ್ಮಶಾನ ಕಾವಲುಗಾರರ ಸೇವೆಯನ್ನು ಒಂದು ವರ್ಷಕ್ಕೆ ಪಡೆದಿತ್ತು. ಅದು ಪೂರ್ಣಗೊಂಡ ಬಳಿಕ ಎರಡು ಬಾರಿ ಟೆಂಡರ್ ಕರೆಯದೇ, ಸಾಮಾನ್ಯ ಸಭೆಯ ನಿರ್ಣಯದ ಆಧಾರದಲ್ಲಿ ಸೇವೆಯನ್ನು ಮುಂದುವರಿಸಲಾಗಿದೆ. ಇದು ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಹಾಗೂ ಪೂರಕ ನಿಯಮ 2000’ಕ್ಕೆ ವಿರುದ್ಧವಾದ್ದು. ಸೇವೆ ಪೂರೈಸಿದ ಏಜೆನ್ಸಿಗೆ 16 ತಿಂಗಳಲ್ಲಿ ₹20.52 ಲಕ್ಷ ಪಾವತಿ ಮಾಡಲಾಗಿದೆ.
ಅದೇ ‘ಸಬೀರ್ ಸೆಕ್ಯೂರಿಟಿ ಸರ್ವೀಸ್ ಬಳ್ಳಾರಿ’ ಏಜೆನ್ಸಿಯಿಂದಲೇ 34 ಡೇಟಾ ಎಂಟ್ರಿ ಆಪರೇಟರ್ಗಳ ಸೇವೆಯನ್ನು 2021-22ರಲ್ಲಿ ಒಂದು ವರ್ಷದ ಅವಧಿಗೆ ಪಾಲಿಕೆ ಪಡೆದಿತ್ತು. ಅವಧಿ ಮುಗಿದರೂ ಟೆಂಡರ್ ಕರೆಯದೇ ಏಜೆನ್ಸಿಯ ಗುತ್ತಿಗೆಯನ್ನು ಮುಂದುವರಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲೆಕ್ಕ ಪರಿಶೋಧಕರು ಪಾಲಿಕೆಗೆ ಸೂಚಿಸಿದ್ದಾರೆ. ಗುತ್ತಿಗೆ ಏಜೆನ್ಸಿಯಿಂದ ಬಡ್ಡಿ ಸಹಿತ ದಂಡ ವಸೂಲಿ ಮಾಡಬೇಕು ಎಂದು ಪಾಲಿಕೆಗೆ ತಿಳಿಸಲಾಗಿದೆ.
34 ಜನರ ಸೇವೆಗಾಗಿ ಪಾಲಿಕೆಯು 8 ತಿಂಗಳಲ್ಲಿ ಒಟ್ಟು ₹65.84 ಲಕ್ಷವನ್ನು ಏಜೆನ್ಸಿಗೆ ಪಾವತಿಸಿರುವುದು ಗೊತ್ತಾಗಿದೆ.
ಇನ್ನು, ಅನಿತ್ ಎಂಟರ್ಪ್ರೈಸಸ್ ಏಜೆನ್ಸಿಯಿಂದ 89 ಜನ ಯುಜಿಡಿ ಕಾರ್ಮಿಕರನ್ನು 2023ರಲ್ಲಿ 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಬಳಿಕವೂ ಸಾಮಾನ್ಯ ಸಭೆ ನಿರ್ಣಯದ ಆಧಾರದಲ್ಲಿ ಏಜೆನ್ಸಿಯ ಕಾರ್ಮಿಕರ ಸೇವೆಯನ್ನು ಮುಂದುವರಿಸಲಾಗಿದೆ.
ಈ ಸೇವೆ ಪಡೆಯಲು ಏಜೆನ್ಸಿಗೆ ನಾಲ್ಕು ತಿಂಗಳಲ್ಲಿ ಪಾಲಿಯು ₹81.27 ಲಕ್ಷ ಪಾವತಿ ಮಾಡಿದೆ.
ಇದರ ಜತೆಗೇ ನೀರು ಸರಬರಾಜು ವಿತರಣೆ ಲೀಕೇಜ್ ನಿರ್ವಹಣೆಗೆ ಟೆಂಡರ್ ಕರೆಯದೇ ತುಂಡುಗುತ್ತಿಗೆ ಆಧಾರದಲ್ಲಿ 2021ರಿಂದ ಹೊರ ಗುತ್ತಿಗೆ ಮೂಲಕ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದ್ದು, ನಿಮಯ ಉಲ್ಲಂಘಿಸಲಾಗಿದೆ. ಇದಕ್ಕಾಗಿ ಪಾಲಿಕೆಯು 10 ತಿಂಗಳಿಗೆ (₹2.64 ಕೋಟಿ) ಖರ್ಚು ಮಾಡಿದೆ.
ಗಾಂಧಿನಗರ ವಾಟರ್ಬೂಸ್ಟ್ (ರವಿಕುಮಾರ)- ₹61.25 ಲಕ್ಷ, ಫೋರ್ಟ್ ವಾಟರ್ ಬೂಸ್ಟರ್ (ರವಿಕುಮಾರ)-₹23.81 ಲಕ್ಷ, ಪಾರ್ವತಿ ನಗರ ವಾಟರ್ ಬೂಸ್ಟ್ (ರವಿಕುಮಾರ)-₹68.83 ಲಕ್ಷ, ಎನ್ಆರ್ ಪಾರ್ಕ್ ವಾಟರ್ ಬೂಸ್ಟ್ (ರವಿಕುಮಾರ)-₹70.47 ಲಕ್ಷ ಪಾವತಿಸಿರುವುದಾಗಿ ಲೆಕ್ಕಪರಿಶೋಧನಾ ಕರಡು ವರದಿಯಲ್ಲಿ ಬರೆಯಲಾಗಿದೆ.



