ಶಿಗ್ಗಾವಿ: ಅನರ್ಹಗೊಳಿಸಿರುವ ಕಾರ್ಮಿಕರ ಕಾರ್ಡ್ಗಳನ್ನು ನವೀಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಶಿಗ್ಗಾವಿ: ಅನರ್ಹಗೊಳಿಸಿರುವ ಕಾರ್ಮಿಕರ ಕಾರ್ಡ್ಗಳನ್ನು ನವೀಕರಣ ಮಾಡುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆನವರ ಅವರಿಗೆ ಮನವಿ ಸಲ್ಲಿಸಿದರು.
ಕಟ್ಟಡ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಫಕ್ಕೀರೇಶ ಶಿಗ್ಗಾವಿ ಮಾತನಾಡಿ, ಕಾರ್ಮಿಕರಲ್ಲ ಎಂದು ಹಲವು ಕಾರ್ಡ್ಗಳನ್ನು ರದ್ದುಪಡಿಸಲಾಗಿತ್ತು.
ಆದರೆ ಈ ಕಾರ್ಡ್ಗಳ ಆಧಾರದ ಮೇಲೆ ಕಾರ್ಮಿಕರು ‘ಕಾರ್ಮಿಕರ ಕಲ್ಯಾಣ ಮಂಡಳಿ’ ವತಿಯಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಕಾರ್ಮಿಕರಲ್ಲದೆ ಇದ್ದಿದ್ದರೆ ಆರೋಗ್ಯ ತಪಾಸಣೆ ಹೇಗೆ ಸಾಧ್ಯವಾಗುತ್ತಿತ್ತು. ಅವರ ತಪಾಸಣೆಗೆ ಅವಕಾಶ ಹೇಗೆ ನೀಡಲಾಯಿತು. ತಕ್ಷಣ ಅಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಆರೋಗ್ಯ ತಪಾಸಣೆ ಪಟ್ಟಿಯಲ್ಲಿ ಹೆಸರಿರುವ ಕಾರ್ಮಿಕರ ಕಾರ್ಡ್ ರದ್ದಾಗಿಲ್ಲ ಎಂಬುವುದನ್ನು ತೋರಿಸುತ್ತದೆ. ಹೀಗಾಗಿ ಕಾರ್ಮಿಕರಿಗೆ ಸಿಗಬೇಕಾದ ಶೈಕ್ಷಣಿಕ ಸಹಾಯಧನ, ವಿವಾಹ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕು. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಸೌಲಭ್ಯ ನೀಡುವ ಮೂಲಕ ಕಾರ್ಡ್ಗಳನ್ನು ನವೀಕರಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ ವಲಯದಲ್ಲಿನ ಬೀದಿ ವ್ಯಾಪಾರಸ್ಥರು, ಹಮಾಲರು ಸೇರಿದಂತೆ ಎಲ್ಲ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡಬೇಕು. ವಿಶ್ವಕರ್ಮ ಯೋಜನೆಗಳಲ್ಲಿನ ಸೌಲಭ್ಯ ನೀಡಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅಡಿ ಮನೆ ನಿರ್ಮಿಸಿಕೊಡಬೇಕು. ಪಡಿತರ ಚೀಟಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಹಿತರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಇದ್ದರು.


