
ಬೆಂಗಳೂರು: ರಾಜ್ಯದಲ್ಲಿ ಮೃತಪಟ್ಟ 2.5 ಲಕ್ಷ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗುತ್ತಿದೆ. ಸುಮಾರು 70 ಸಾವಿರ ಕೋಟಿ ರೂಪಾಯಿ ಸರ್ಕಾರದ ಹಣ ದುರುಪಯೋಗವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಹಣ ಹಿಂಪಡೆಯಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ರಾಜ್ಯದಲ್ಲಿ ಸದ್ಯ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಪ್ರತಿ ತಿಂಗಳು 15 ಸಾವಿರದಷ್ಟು ಗೃಹಲಕ್ಷ್ಮಿ ಫಲಾನುಭವಿಗಳು ಸೇರ್ಪಡೆಯಾಗುತ್ತಿದ್ದಾರೆ. ವಾರ್ಷಿಕ 2,500 ಕೋಟಿ ರೂಪಾಯಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಎರಡು ವರ್ಷಕ್ಕೊಮ್ಮೆ ಜೀವಿತ ಪ್ರಮಾಣ ಪತ್ರ ಪಡೆಯಲು ತಿಳಿಸಲಾಗಿದೆ. ಆದರೆ ಅಷ್ಟು ದೀರ್ಘಾವಧಿಯಲ್ಲಿ ಅನೇಕರು ಮೃತಪಟ್ಟಿದ್ದಾರೆ.
ಸುಮಾರು 2.50 ಲಕ್ಷ ಮಂದಿಯ ಗೃಹಲಕ್ಷ್ಮಿ ಹಣ ದುರುಪಯೋಗವಾಗಿದೆ. ನಿಧನರಾದ ಕೂಡಲೇ ಮಾಹಿತಿ ನೀಡದ ಪರಿಣಾಮ ಅಂತಹವರ ಖಾತೆಗೆ 70 ಕೋಟಿ ರೂಪಾಯಿ ಜಮಾ ಆಗಿದೆ. ಅವರ ಹೆಸರಲ್ಲಿ ಪಡಿತರ ಕೂಡ ಪಡೆದಿರುವ ಸಾಧ್ಯತೆಯಿದ್ದು ಕುಟುಂಬ ತಂತ್ರಾಂಶದ ಮೂಲಕ ಈ ದುರುಪಯೋಗ ಪತ್ತೆಯಾಗಿದೆ.
ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಅವರನ್ನು ಯೋಜನೆಯಿಂದ ಕೈ ಬಿಡಲಾಗುವುದು. ಅಲ್ಲದೆ ಇದಕ್ಕಾಗಿ ಇ-ಕೆವೈಸಿ ತಂತ್ರಜ್ಞಾನ ಆಧಾರಿತ ಆಪ್ ಅಭಿವೃದ್ಧಿಪಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಿಧನರಾದ ಫಲಾನುಭವಿಗಳ ಮಾಹಿತಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.



