ಯಲ್ಲಾಪುರ ಬಾಗಿಲು ಮುಚ್ಚಿದ ಇಂದಿರಾ ಕ್ಯಾಂಟೀನ್

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಕಳೆದ ಒಂದು ವಾರದಿಂದ ಬಾಗಿಲು ಮುಚ್ಚಿದೆ.
ಕೂಲಿಕಾರ್ಮಿಕರಿಗೆ, ವಿಶೇಷವಾಗಿ ವಾರದ ಸಂತೆಯ ದಿನ ಊಟ, ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟೀನ್ ಆಶ್ರಯಿಸಿದ್ದ ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳಿಗೆ ಇದರಿಂದ ಹೆಚ್ಚಿನ ತೊಂದರೆಯಾಗಿದೆ.
‘ಕಳೆದ ಒಂದು ವರ್ಷದಿಂದ ನಮಗೆ ಸಂಬಳ ಬಂದಿಲ್ಲ. ಕಿರಾಣಿ, ಗ್ಯಾಸ್ ಬಿಲ್ ಪಾವತಿಸಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಿದಾಗ ‘ನಮ್ಮ ಬಿಲ್ ಪಾಸಾಗಿಲ್ಲ’ ಎನ್ನುತ್ತ ಒಂದೆರಡು ಸಾವಿರ ರೂಪಾಯಿಗಳನ್ನು ಖಾತೆಗೆ ಜಮಾ ಮಾಡುತ್ತಾರೆ. ಸೂಕ್ತ ಸಮಯಕ್ಕೆ ಸಂಬಳ ಬಾರದಿರುವುದು ನಮಗೆ ಸಮಸ್ಯೆಯಾಗಿದೆ’ ಎನ್ನುತ್ತಾರೆ ಇಂದಿರಾ ಕ್ಯಾಂಟೀನ್ನ ಗುತ್ತಿಗೆ ಕಾರ್ಮಿಕರು.
‘ಸಂಬಳದ ಬಗ್ಗೆ ಕೇಳಿದರೆ ಜಾಣ ಕುರುಡುತನ ತೋರಿಸುವ ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್ ಬಂದ್ ಮಾಡಬಾರದು. ಗ್ರಾಹಕರಿಂದ ಬರುವ ದುಡ್ಡಿನಲ್ಲಿ ಕಿರಾಣಿ ತಂದು ಕ್ಯಾಂಟೀನ್ ನಡೆಸಬೇಕು ಎನ್ನುತ್ತಾರೆ. ಅದು ಹೇಗೆ ಸಾಧ್ಯ. ಮೊದಲೇ ತಿಂಗಳು ತಿಂಗಳು ಸಂಬಳ ನೀಡುತ್ತಿಲ್ಲ. ಆದರೂ ಕ್ಯಾಂಟೀನ್ ಬಂದ್ ಮಾಡಬಾರದೆಂಬ ಉದ್ದೇಶದಿಂದ ನಾವೇ ಕಿರಾಣಿ ಅಂಗಡಿಯಲ್ಲಿ ಬಾಕಿ ಮಾಡಿ, ಅವರಿವರಲ್ಲಿ ಕೈಗಡ ತಂದು ಕ್ಯಾಂಟೀನ್ ನಡೆಸುತ್ತಿದ್ದೇವೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳೂ ನಮಗೆ ಕೆಲ ಸಲ ಕೈಯಿಂದ ಹಣ ನೀಡಿದ್ದಾರೆ. ಈಗ ಕಿರಾಣಿ, ಗ್ಯಾಸ್, ತಕರಾರಿ ಅಂಗಡಿಯ ಬಾಕಿ ಬೆಳೆದಿದೆ. ಅವರು ಹಣ ಯಾವಾಗ ಕೊಡುತ್ತೀರಿ ಎಂದು ನಮ್ಮನ್ನು ಕೇಳುತ್ತಿದ್ದಾರೆ. ಹೀಗಿರುವಾಗ ಕ್ಯಾಂಟೀನ್ ನಡೆಸುವುದು ಹೇಗೆ?’ ಅನ್ನುವುದು ಅವರ ಪ್ರಶ್ನೆ.
‘ಗುತ್ತಿಗೆದಾರರು ಒಂದು ವರ್ಷದಿಂದ ಈ ಕಡೆ ಮುಖ ಹಾಕಿಲ್ಲ. ಕನಿಷ್ಠ ಕ್ಯಾಂಟೀನ್ ಹೇಗೆ ನಡೆಯುತ್ತಿದೆ ಎಂದು ನೋಡಲೂ ಬಂದಿಲ್ಲ’ ಎನ್ನುತ್ತಾರೆ ವ್ಯವಸ್ಥಾಪಕ ನರೇಂದ್ರ.
‘ಕ್ಯಾಂಟೀನ್ನಲ್ಲಿ ಬೆಳಿಗ್ಗೆ ₹ 5ಕ್ಕೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ₹ 10ಕ್ಕೆ ಊಟ ಸಿಗುತ್ತಿತ್ತು. ಇದರಿಂದ ನಮಗೆ ಬಹಳ ಅನುಕೂಲವಾಗಿತ್ತು’ ಎನ್ನುತ್ತಾರೆ ಕುಮಟಾದಿಂದ ತರಕಾರಿ ತರುವ ಯಂಕು ಗೌಡ.
ಕ್ಯಾಂಟೀನ್ನಲ್ಲಿ 200 ಜನರಿಗೆ ಆಹಾರ ಒದಗಿಸಲು ಸರ್ಕಾರದ ಅನುಮತಿ ಇದೆ. ವ್ಯಕ್ತಿಯೊಬ್ಬರಿಗೆ ಒಂದು ದಿನ ಮೂರು ಹೊತ್ತು ಆಹಾರ ಪೂರೈಸಲು ₹ 42ಕ್ಕೆ ಟೆಂಡರ್ ಆಗಿದೆ. ಈ ಪೈಕಿ ₹ 25 ಗ್ರಾಹಕನಿಂದ ಪಾವತಿಯಾದರೆ ಉಳಿದ ₹ 17ನ್ನು ಸರ್ಕಾರ ಭರಿಸುತ್ತದೆ. ಕ್ಯಾಂಟೀನ್ ಏಕೆ ಬಂದ್ ಮಾಡಿದ್ದೀರಿ ಎಂದು ಗುತ್ತಿಗೆದಾರರನ್ನು ಕೇಳಲು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರ ಸಂಪರ್ಕ ಲಭ್ಯವಾಗಿಲ್ಲ.
ಸುನಿಲ್ ಗಾವಡೆ,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಹೊಸ ಗುತ್ತಿಗೆದಾರರಿಗೆ ಕ್ಯಾಂಟೀನ್ ನಡೆಸಲು ಟೆಂಡರ್ ಆಗಿದೆ. ಅವರು ಫೆಬ್ರುವರಿ 1ರಿಂದ ಆರಂಭಿಸಬಹುದು. ಅದುವರೆಗೂ ಹಿಂದಿನ ಗುತ್ತಿಗೆದಾರರೇ ಮುಂದುವರಿಸಬೇಕಿದೆ



