ಕುಂಭಮೇಳದಲ್ಲಿ ಮಹಾ ದುರಂತ: ಕಾಲ್ತುಳಿತಕ್ಕೆ ಬೆಳಗಾವಿಯ ನಾಲ್ವರು ಬಲಿ; ಮೃತದೇಹಗಳನ್ನು ಏರ್ಲಿಫ್ಟ್ ಮಾಡಲು ಸಿದ್ಧತೆ!

ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಖಚಿಪಡಿಸಿದ್ದಾರೆ. ಇನ್ನು ನಾಲ್ವರ ಮೃತ ದೇಹವನ್ನು ರಾಜ್ಯಕ್ಕೆ ತರಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಏರ್ಲಿಫ್ಟ್ ಮಾಡಲು ಸಿದ್ದತೆ
ನಾಲ್ವರ ಮೃತದೇಹಗಳನ್ನು ಪ್ರಯಾಗರಾಜ್ನಿಂದ ದೆಹಲಿಗೆ ಆಂಬುಲೆನ್ಸ್ನಲ್ಲಿ ರವಾನೆ ಮಾಡಲಾಗುತ್ತದೆ. ಬಳಿಕ ದೆಹಲಿಯಿಂದ ಬೆಳಗಾವಿಗೆ ಏರ್ಲಿಫ್ಟ್ ಮಾಡಲು ಸಿದ್ದತೆ ಕೈಗೊಳ್ಳಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ನಾಲ್ವರ ಮೃತದೇಹಗಳನ್ನು ಬೆಳಗಾವಿಗೆ ತರಲಾಗುತ್ತದೆ.
ಪ್ರಯಾಗರಾಜ್ಗೆ ಇಬ್ಬರು ಅಧಿಕಾರಿಗಳು
ಮೃತರನ್ನು ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ್ ಮತ್ತು ಅವರ ಮಗಳು ಮೇಘ ಹಾಗೂ ಶಿವಾಜಿ ನಗರದ ನಿವಾಸಿ ಮಹಾದೇವಿ, ಶೆಟ್ಟಿ ಗಲ್ಲಿಯ ನಿವಾಸಿ ಅರುಣ ಕೋಪರ್ಡ್ ಎಂದು ಗುರುತಿಸಲಾಗಿದೆ. ಈಗಾಗಲೆ ಬೆಳಗಾವಿಯಿಂದ ಪ್ರಯಾಗರಾಜ್ಗೆ ಇಬ್ಬರು ಅಧಿಕಾರಿಗಳು ತೆರಳಿದ್ದಾರೆ. ಎಎಸ್ಪಿ ಶೃತಿ ಹಾಗೂ ಕೆಎಎಸ್ ಅಧಿಕಾರಿ ಹರ್ಷ ಶೆಟ್ಟಿ ಅವರು ಪ್ರಯಾಗರಾಜ್ ತೆರಳಿದ್ದು, ಮೃತದೇಹಗಳನ್ನು ಬೆಳಗಾವಿಗೆ ತರಲಿದ್ದಾರೆ.
ದುರಂತದಲ್ಲಿ ಒಂದೇ ಜಿಲ್ಲೆಯ ನಾಲ್ವರು ಬಲಿ
ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ ಆರಂಭಿಸಿದ್ದ13 ಜನರ ತಂಡದಲ್ಲಿ ಜ್ಯೋತಿ ಹತ್ತರವಾಠ (50) ಮತ್ತು ಮೇಘಾ ಹತ್ತರವಾಠ್ ಹೋಗಿದ್ದರು. ಬೆಳಗಾವಿ ವಡಗಾವಿ ನಿವಾಸಿಯವರಾಗಿದ್ದ ಜ್ಯೋತಿ ಮತ್ತು ಮೇಘಾ ಕುಂಭ ಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯಾತ್ರಾರ್ಥಿ ಶೆಟ್ಟಿಗಲ್ಲಿಯ ಅರುಣ ಕೋಪರ್ಡ್ ಅವರು ಪತ್ನಿ ಜೊತೆಗೆ ಪ್ರಯಾಗ್ ರಾಜ್ಗೆ ತೆರಳಿದ್ದರು. ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿ ಅವರನ್ನು ಪ್ರಯಾಗರಾಜ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅರುಣ್ ಕೋಪಾರ್ಡ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಶಿವಾಜಿ ನಗರದ ನಿವಾಸಿ ಮಹಾದೇವಿ ಎಂಬುವವರು ಕೂಡ ಮೃತಪಟ್ಟಿದ್ದು, ಆಕೆಯ ಪತಿ ಮಾತನಾಡಿ ಕಳೆದ ಮೂರು ದಿನಗಳ ಹಿಂದೆ ಮೂವತ್ತು ಜನ ಕುಂಭಮೇಳಕ್ಕೆ ಹೋಗಿದ್ರು. ಕಾಲ್ತುಳಿತದಲ್ಲಿ ನನ್ನ ಪತ್ನಿ ಸಾವನ್ನಪ್ಪಿರೋದು ಖಚಿತವಾಗಿದೆ. ಇನ್ನೂ ಶವ ಮಾತ್ರ ಪತ್ತೆಯಾಗಿಲ್ಲ ಎಂದು ಹೇಳಿದ್ದರು. ಇನ್ನು ಬೆಳಗಾವಿ ಜಿಲ್ಲೆಯೊಂದರಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ನ್ಯೂಸ್18ಗೆ ಹೇಳಿದ್ದು, ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಈ ತಂಡ ಪ್ರಯಾಗರಾಜ್ಗೆ ತೆರಳಿ ಮೃತದೇಹಗಳನ್ನು ವಾಪಸ್ಸು ತರುವ ಪ್ರಯತ್ನ ಮಾಡುತ್ತದೆ ಎಂದು ಮಾಹಿತಿ ನೀಡಿದ್ದರು.



