ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿನ ಶಿರಾದಲ್ಲೇ ಆಗಬೇಕು: ವಿಮಾನ ನಿಲ್ದಾಣದಿಂದ 7-8 ಜಿಲ್ಲೆಗಳಿಗೆ ಅನುಕೂಲ: ಸತೀಶ್ ಜಾರಕಿಹೊಳಿ

ಬೆಂಗಳೂರು: ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿನ ಶಿರಾದಲ್ಲೇ ಆಗಬೇಕು ಎಂಬ ಕೂಗಿಗೆ ಸಚಿವ ಸತೀಶ ಜಾರಕಿಹೊಳಿ ಕೂಡ ದನಿಗೂಡಿಸಿದ್ದು, ನಾಲ್ಕೈದು ಪ್ರಭಾವಿ ಸಚಿವರ ಒತ್ತಡದಿಂದ ಶಿರಾ ಶಿಫಾರಸು ಕೈಬಿಟ್ಟಿರಬಹುದು ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಆರು ತಿಂಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಶಿರಾ ಬಳಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತೆ ಹೇಳಿದ್ದೆ.
ಅದು ಈಗ ಚರ್ಚೆಗೆ ಬಂದಿದೆ. ಅಲ್ಲಿ ಮಾಡುವುದರಿಂದ ಏಳೆಂಟು ಜಿಲ್ಲೆಗಳಿಗೆ ಅನುಕೂಲ ಆಗಲಿದೆ’ ಎಂದು ಪುನರುಚ್ಛರಿಸಿದರು.
“ಹಲವು ಶಾಸಕರು ಈ ಸಂಬಂಧ ದನಿ ಎತ್ತಿದ್ದು, ಈ ಬಗ್ಗೆ ಈಗ ಮತ್ತೂಮ್ಮೆ ಪರಿಶೀಲನೆ ನಡೆಸುವ ಅವಶ್ಯಕತೆ ಇದೆ. ಶಿರಾ ಬಳಿ ಜಾಗ ಗುರುತಿಸಲಾಗಿದೆ. ಹಾಗಂತ, ಇಲ್ಲಿ ತಪ್ಪಿಸಿ (ಈಗ ಗುರುತಿಸಿರುವ ಜಾಗ) ಅಲ್ಲಿ ಮಾಡಬೇಕು ಅಂತ ಅಲ್ಲ. ನೆಲಮಂಗಲ, ತುಮಕೂರು, ವಸಂತನರಸಾಪುರ, ಶಿರಾ ಎಲ್ಲಿಯಾದರೂ ಆಗಲಿ. ನಾನು ಈಚೆಗೆ ದೆಹಲಿಗೆ ಹೋದಾಗ ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಭೇಟಿ ಮಾಡಿದ ವೇಳೆ ಕೂಡ ಈ ಬಗ್ಗೆ ಗಮನಸೆಳೆದಿದ್ದೇನೆ’ ಎಂದರು.
ಶಿರಾ ಹೆಸರು ಶಿಫಾರಸು ಕೈಬಿಟ್ಟ ವಿಚಾರದ ಬಗ್ಗೆ ಕೇಳಿದಾಗ, “ಸಂಪುಟದಲ್ಲಿ ನಾಲ್ಕೈದು ಪ್ರಭಾವಿ ಸಚಿವರು ಇದ್ದಾರೆ. ಅವರು ಒತ್ತಡ ಮಾಡಿರಬಹುದು’ ಎಂದ ಅವರು, ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಿದೆ. ಈ ಹಿನ್ನೆಲೆಯಲ್ಲೂ ತುಮಕೂರು ಸೂಕ್ತವಾಗಿದೆ. ಇತರೆ ಜಿಲ್ಲೆಗಳಿಗೂ ಅನುಕೂಲವಾಗಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಿದಾಗ, “ಎಐಸಿಸಿ ಕಾರ್ಯಾಕಾರಿಣಿಯಲ್ಲಿ ಅದರ ಚರ್ಚೆಯಾಗಿಲ್ಲ. ಕೆಲವು ಕಡೆ ಪದಾಧಿಕಾರಿಗಳನ್ನು ನೇಮಿಸಬೇಕೆಂದಿದೆ. ಇದೆಲ್ಲದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.
ಜಾತಿ ಗಣತಿ ವರದಿ; ಕಾದುನೋಡೋಣ
ಶೋಷಿತ ಸಮುದಾಯಗಳ ಕೈಹಿಡಿಯಬೇಕು ಅಂತ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪದೇ ಪದೇ ಹೇಳುತ್ತಿರುತ್ತಾರೆ. ಹಾಗಾಗಿ, ಕಾರ್ಯಕ್ರಮ ರೂಪಿಸಲಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾತಿ ಗಣತಿ ವರದಿ ಅನುಷ್ಠಾನದ ಬಗ್ಗೆ ಶುಕ್ರವಾರದವರೆಗೆ ಕಾದುನೋಡೋಣ. ಆದರೆ, ಶೋಷಿತ ಸಮುದಾಯಗಳನ್ನು ಕೈಹಿಡಿಯುವುದು ಪಕ್ಷದ ಆದ್ಯತೆ ಆಗಿದೆ. ಇದನ್ನೇ ರಾಷ್ಟ್ರೀಯ ನಾಯಕರೂ ಪದೇ ಪದೇ ಹೇಳುತ್ತಾರೆ. ಅದರಂತೆ ಕಾರ್ಯಕ್ರಮ ರೂಪಿಸಲಿದ್ದೇವೆ’ ಎಂದರು.


